Tuesday, 9 February 2016

ಸಾತಿ,,,(ಸಣ್ಣ ಕಥೆ) ---ಚಂದ್ರು ಎಂ ಹುಣಸೂರು

ಸಾತಿ
ಗುರುವಾರ ರಾತ್ರಿ ಚೆನ್ನೀರಮ್ಮನ ಮಾಮೂಲಿ ಹಿಂಡು ಗುಡಿಸಲಿನ ಹೊರಗೆ, ಹೊಳಗೆ, ಹೀರುತ್ತಾ, ಹರಟುತ್ತಾ, ಹಾರಾಡುತ್ತಾ, ನಿಂತಿದ್ದರು, ಕೂತಿದ್ದರು, ಮಲಗಿದ್ದರು, ತೇಲಾಡುತ್ತಿದ್ದರು. ಹಲವರಾಗಲೆ ಬಂದಿದ್ದು, ಕೆಲವರು ಆಗಾಗ ಸೇರ್ಪಡೆಯಾಗುತ್ತಿದ್ದರು. ಹಲವರು ಅಲ್ಲೆ ತಂಗುವ ನಿರೀಕ್ಷೆಯಿದ್ದು ಕೆಲವರು ಹೋಗಲು ಮನಸ್ಸೊಪ್ಪದೆ ಅಲ್ಲಿದ್ದವರೆಲ್ಲ ನಿಶ್ಯಬ್ಧವಾಗಲೆಂದು ಕಾಯುತ್ತಿದ್ದರೆನಿಸುತ್ತದೆ. ತಂದೆ ಮರುಳಯ್ಯನಿಗೆ ತಿಳಿಯದ ಹಾಗೆ ಕುಡಿಯೋದನ್ನು ಶುರುಮಾಡಿಕೊಂಡಿದ್ದ ಕೆಂಗಾಲು ಗೊತ್ತಾದ ಮೇಲು ಗೊತ್ತಾಗದಂತೆ ಕುಡಿಯುತ್ತಿದ್ದ. ಅದು ಅಪ್ಪನ ಮರ್ಯಾದೆ ಗೇಡು ಎಂದು ತಿಳಿದಿದ್ದರು ಹಾಗತಾನೆ ಜನ್ಮ ತಾಳುತ್ತಿದ್ದ ಚಟವನ್ನು ಅವರಿವರನ್ನು ನೋಡಿ ಕಲಿತಿದ್ದರಿಂದ ಅವರಿವರಿವರೆಲ್ಲ ಹೀರುವಾಗ ಅವನದ್ದು ಅಷ್ಟು ತಪ್ಪಾಗಿ ಕಂಡಿರಲಿಲ್ಲ. ನೀಲ್ಗೆರೆಯ [ನೀಲಿ ಕೆರೆಯ] ಹಂಚಿನಲ್ಲಿದ್ದ ಅಪ್ಪನ ಅಡಿಕೆ ತೋಟ ದಿನಕ್ಕಾದಷ್ಟು ಅಗೆದು ಬೆವರು ಬರದಂತಾದಾಗ ಅಲ್ಲೆ ಮಲಗಿ ಮಗುಲು ಹಳ್ಳಿಯ ಅತ್ತೆಯ ಮಗಳು ಮಾಯಮ್ಮನೊಂದಿಗೆ ಮುದ್ದಾಟ ಮುಗಿಯುವಷ್ಟರಲ್ಲಿ ಬೆಚ್ಚೆದ್ದು ತಲೆ ಕೆರೆದುಕೊಳ್ಳತ್ತಾ, sಸ್ಥಿತಿ ಗಮನಿಸಿ ನನಸಲ್ಲವೆಂದು ನಸುನಕ್ಕು, ಭಾಗ್ಯಕ್ಕಾಗಿ ಬೆವತು, ಬಾಗಿ ಮತ್ತೆ ಬಗೆಯಲಾರಂಭಿಸಿದನು. ನೀರಸದಿಂದ ಒಂದಷ್ಟು ಅಗೆದು ಇನ್ನೊಂದಷ್ಟು ಉಳಿಸಿ ಉಳಗುದಲಿ ಅಲ್ಲೆ ಬಿಸಾಡಿ ಎತ್ತಿದಂತಹ ಅಡಿಕೆಗಳನ್ನು ಅಪ್ಪ ಬಳಸಿದ ಪಂಚೆ ಹರಿದೋದ ಮೇಲೆ ಸುತ್ತ ಮುತ್ತ ಕತ್ತರಿಸಿದ ಹಳ್ಳಿ ಸಮವಸ್ತ್ರವನ್ನು ಕರವಸ್ತ್ರವಾಗಿಟ್ಟುಕೊಂಡಿದ್ದರಲ್ಲಿ ಗಂಟುಕಟ್ಟಿ ಹೆಗಲಿಗೇರಿಸಿ ಚೆನ್ನೀರಮ್ಮನ ನೆಮ್ಮದಿ ತಾಣಕ್ಕೆ ಬರುವುದರೊಳಗೆ ನಸುಗತ್ತಲು,,,

             ಬೇಡ ಎನ್ನುವುದ ಬೇಕು ಎನ್ನುವುದೆ
             ಚಂಚಲ ಚೋರ ತೆವಲು
             ಅತಿಯಾದ ಗೇಯ್ಮೆಯಲಿ ಒಂಚೂರು ಚಟವು
             ಮನಕೆ ಮುಗಿಯದ ಹೊನಲು,,

    ಹೇಳಿ ಮಾಡಿಸಿದ ಹೊತ್ತು, ಹರೆಯದವ ಮಿಕ್ಕವರಿಗೆಲ್ಲ ಮಿತಿಯಾಗಿ ಕುಡಿಯುತಿದ್ದು ಅವ್ವನ ಹಿಡಿತುಂಬ ಬೆಣ್ಣೆ, ಬಿಸಿಬಿಸಿ ಮುದ್ದೆ, ಕೆಂಗಾಲು ನಡೆದು ಬಂದ ನೆಲ ಸದ್ದು ಮಾಡುವಂತಿತ್ತು. ಬಿರುಸಾಗಿ ಬಂದವ ಗಿರಾಕಿಗಳನ್ನು ಸಂಭಾಣಿಸಿ ಗಲ್ಲ ಪೆಟ್ಟಿಗೆ ಚಿಲ್ಲರೆಯ ಮೇಲೆ ಕೈಯ್ಯಾಡಿಸುತ್ತಾ, ತಾಂಬೂಲ ತುಂಬುತ್ತಿದ್ದವಳ ಕಡೆಗೆ ಗಂಟನ್ನು ಎಸೆದ. ಹಣವಿಲ್ಲದವ ಹೆಂಡಕ್ಕಾಗಿ ಕೊಡುತ್ತಿದ್ದುದು ಅಡಿಕೆ. ಅವತ್ತೇನೊ ಕೆಂಗಾಲುವಿನಲಿ ಪೌರುಷದ ಪ್ರಮಾಣ ಪ್ರಜ್ಞೆಗೆ ಬರುವಂತೆ ಬಾಸವಾದ್ದರಿಂದ ಹೆಂಡ ಕೊಡುವುದಕ್ಕೆ ನಿಧಾನಿಸಿದಳು. ಅವಳಿಗದು ಮಾಮೂಲಿ ರೋಗ. ಮೇಲೆ ಬೀಳುತ್ತಿದ್ದವರನ್ನು ಅವರವರ ಗ್ರಾಮದ ಮುಖಂಡತ್ವದ ಮೇಲೆ ಸುಮ್ಮನಾಗುತ್ತಿದ್ದಳು. ಅಂಗಡಿಯ ಅಂಗರಕ್ಷಕರಿಗೆ ತನ್ನ ಕೈಲಾದ ಸೇವೆ ಮಾಡುತ್ತಿದ್ದಳು. ಸೆರಗು ಜಾರುವುದು ಸಾಮಾನ್ಯವಾಗಿತ್ತು. ಒಳ್ಳೆ ಗುಣಗಳು ಸುಪ್ತವಾಗಿ ಅನೈತಿಕತೆ ನಿತ್ಯ ನರ್ತಿಸಿತ್ತಿತ್ತು. ಸಮಾಜದಲ್ಲಿ ಇದೊಂದು ದೊಡ್ಡ ತಪ್ಪಾದರೂ ಗೌಪ್ಯತೆ ಸಹಿಸಿಕೊಳ್ಳತ್ತಿದೆ. ಆದರೆ ಇಲ್ಲಿ  ತಪ್ಪು ಸರಿಗಿಂತ ಅವಳು ಕಂಡುಕೊಂಡಿದ್ದ ಬದುಕು ಮುಖ್ಯವಾಗಿತ್ತು. ಗುಡಿಸಲೊಳಗಿನ ಜೀವನ ಹಾಗಾಗ ಬಿಸಿಯಾದರೂ ಸಲೀಸಾದ ಜೀವನಕ್ಕೆ ಅದು ಮಸಿಯಂತೆ ಎಂದೂ ಅನ್ನಿಸಿರಲಿಲ್ಲ. ಅನ್ನಿಸಿದ್ದರೂ "ಬದಲಾವಣೆ"ಯಾಗುವ ಮನಸ್ಸು ಮಾಡಿತ್ತಿರಲಿಲ್ಲ. ಮನಸ್ಸು ಮಾಡಿದ್ದರೂ ಯೌವ್ವನಾವಸ್ಥೆಯಿಂದ ಜಾರಿಯಲಿದ್ದ ಪದ್ದತಿ ಜರೂರಿಯಾಗಿ ನಿಲ್ಲಿಸುತ್ತೀನೆಂದರೆ ಗಂಡಸರಿರಲಿ ಊರಿನ ಹೆಂಗಸರೂ ಸುಮ್ಮನಿರುತ್ತಿರಲಿಲ್ಲಎಷ್ಟಾದರೂ ಒಡೆದ ಗಾಜು ನೋಡಿ. ಹಾಗಂತ ಎಲ್ಲರಿಗಿರಲಿಲ್ಲ ಚೆನ್ನೀರಮ್ಮ,,

             ಮೋಹ ದಾಹಗಳಿಗೆ
             ಒಲಿದು ಕಳೆದಾಯ್ತು ಮನವ,,
             ಹಲವು ಆಸೆಗಳ ಬೆರಳು
             ಬರೆದು ಮುಗಿದಂತೆ ಪುಟವ,,
 
    ಹಳೇ ಹುಲಿಗಳ ಪರಚಾಟದಿಂದ ಹೊಸತನ ಮರೆತಿದ್ದ ಚೆನ್ನೀರಮ್ಮನಲ್ಲಿ ಕೆಂಗಾಲುವಿನ ಮೇಲೆ ಕಾಮ, ಪ್ರೇಮ, ಮಿಶ್ರ ದಾಹ. ಯಾವತ್ತೂ ಗಮನಿಸದವಳು ಇಂದು ನೋಡುತ್ತಿರುವುದನ್ನು ಕಕ್ಕಾಬಿಕ್ಕಿಯಾಗಿ ಆಲಿಸಿದ ಕೆಂಗಾಲು ದಿಢೀರನೆ ರಸಿಕನಾದ. ಯೌವನದಲ್ಲಿ  ಕೆಲವಕ್ಕೆ ಅತಿವೇಗ. ನಸುಬೆಳಕಿನಲ್ಲಿ ಇಬ್ಬರ ಸುತ್ತ ಅವರೆಲ್ಲರಿದ್ದರೂ ಅವರ ಚಿತ್ತ ಇವರತ್ತಿರವಿರಲಿಲ್ಲ. ಹಾಗೆ ಹೆಂಡ ಕೊಡಲೋದವಳು ಅವನ ಕೈ ಹಿಡಿದಳು. ಕಂಪಿಸಿದವ ಒಪ್ಪಿ ಮುಪ್ಪಾದ. ಸನ್ನೆಗಳನ್ನೆಲ್ಲ ಸಾವಾಕಾಶವಾಗಿ ಗ್ರಹಿಸಬಲ್ಲ ಚಾಕಚಕ್ಯತೆ ಅವನಿಗಿಲ್ಲದಿದ್ದರು ಅಂದು ಮಾತ್ರ ಬೇಗ ಅರಿತ. ಗಲ್ಲ ಮರೆತು ಬೆಲ್ಲದ ರುಚಿ ತುದಿನಾಲಿಗೆ ತಾಕಿದಂತಾಗಿ ವ್ಯಾಪಾರ ಬೇಗ ಮುಗಿಸುವಲ್ಲಿ ರಾಗ ಹಾಡಿದಳು. ಎಲ್ಲರು ಒಬ್ಬೊಬ್ಬರಾಗಿ ಹರಟಿ ಜಾಗ ಖಾಲಿ ಮಾಡುವುದರೊಳಗೆ ಮಧ್ಯರಾತ್ರಿ ಸಮೀಪವಾಗುವಲ್ಲಿತ್ತು. ಅದಕ್ಕಾಗೆ ಕಾದು ಹೆಂಡದಂಗಡಿಯ ಹಿಂಬದಿ ಪೊದೆಯಲ್ಲಿ ಕೇದಗೆಯ ನಾಗನಂತೆ ಅರಳುತ್ತಾ, ಬುಸುಗುಡುತ್ತಾ, ಕುಳಿತಿದ್ದ ಕೆಂಗಾಲು ಮುಂದಿನಾಟಕ್ಕೆ ಗುಡಿಸಲೊಳಗೆ ಬರಲೋದನು. ಬರುತ್ತಾನೆಂದು ಭಾವಿಸಿ ಹಚ್ಚಿ ಮಲಗಿದ್ದಳು ಕಿರು ಲ್ಯಾಟೀನು.
ಹುಡುಗ ಬರುವುದಿಲ್ಲವೆಂದು ಮರೆತು ಬಾಗಿಲು ಮುಚ್ಚಿಕೊಂಡಿದ್ದ ಚೆನ್ನೀರಮ್ಮ ಶಬ್ಧವಾದೊಡನೆ ಸಂಭ್ರಮದಿಂದ ಸಾಗಿ, ಬಾಗಿ, ಬಾಗಿಲು ತೆರೆದಳು. ಒಂದೆ ಸಲನೆ ಒಳನುಗ್ಗಿದವನನ್ನು, ಆತ್ಮೀಯವಾಗಿ ನಕ್ಕು ಬರಮಾಡಿಕೊಂಡಳು. ಊರಿನ ಮರ್ಯಾದಸ್ತ ಮಾಚಪ್ಪ ಮರ್ಯಾದೆಗೆಂದೆ ಹೆಸರು. ಅದನ್ನುಳಿಸಿಕೊಳ್ಳಲು ಕಷ್ಟದಿಂದ ಗುಡಿಸಲಿನ ಬಳಿಗೆ ಬಂದಿದ್ದ. ಏನೋ ಶಬ್ದ, ಕೊಂಚ ಬೆಳಕನ್ನು ಕಂಡು ಮೆಲ್ಲಗೆ ಬಾಗಿ ನೋಡಲು ಭಯಗೊಂಡನು. ಮಾಚಪ್ಪನ ಕಾಲು ತಾಗಿ ಬಿದ್ದ ಮಡಿಕೆ ಶಬ್ದದಿಂದ ದಿಗ್ಬ್ರಾಂತನಾದ ಕೆಂಗಾಲು ಗಾಳಿವೇಗದಿಂದ ಹಾರಿ ಅಡ್ಡಲಾಗಿದ್ದ ಅವನನ್ನು ತಳ್ಳಿ ಓಡಿದನು. ನಿರಾಸೆ ಮತ್ತು ಭಯದಿಂದ ಮೌನಿಯಾದ ಚೆನ್ನೀರಮ್ಮ ಹಸಿದು ಬಂದಿದ್ದ ಮರ್ಯಾದೆ ಮಾಚಪ್ಪನ ತುತ್ತಾದಳು.






            ಚಾಚಿ ಅಪ್ಪುವ ಇಂಗಿತ
            ನೈತಿಕ ಹಲ್ಲೆಯ ಮಾಡುತ,,
            ಬರಿ ಬಾಹ್ಯಕ್ಕೆಂದೆ ಬಡಿದಾಡು ಮನವೆ
            ಆಂತರಿಕ ಮೌಲ್ಯಗಳ ನೀ ಸುಡುವೆ,,

     ಬೆಳಗಾಗುವುದರೊಳಗೆ ಪಿತೂರಿಯಂತೆ ಚೆನ್ನೀರಮ್ಮನ ಮಗ್ಗುಲಿನಾಸೆಗೆ ಯಾರೂ ಇಲ್ಲದಾಗ ಮರುಳಪ್ಪನ ಮಗ ಮೂಗುದಾರ ಕಿತ್ತು ಬಂದಿದ್ದನೆಂದು ತನ್ನ ಮರ್ಯಾದೆ ಹೆಚ್ಚಿಸಿಕೊಳ್ಳುವ ಕಾರ್ಯ ಮಾಡುತಿದ್ದ ಮಾಚಪ್ಪ, ತಾನೆ ಕಣ್ಣಾರೆ ಕಂಡುದುದಾಗಿಯೂ ಸತ್ಯ ಹೇಳುತ್ತಿದ್ದೇನೆಂದು ಹೇಳುತಿದ್ದ. ಇದು ಚೆನ್ನೀರಮ್ಮನಿಗೆ ತುಸು ಕಷ್ಟವಾಗಿತ್ತು. ರಾತ್ರಿ ಚೆನ್ನೀರಮ್ಮನ ಮೌನವನ್ನು ಮುಕ್ತವಾಗಿ ಬಳಸಿಕೊಂಡಿದ್ದ ಮಾಚಪ್ಪ, ತನ್ನ ಸ್ವಂತ ರಾಗ ಪೂರ್ತಿ ಬಳಸಿ ಗ್ರಾಮದಲ್ಲಿ ವರದಿ ವಿಶ್ಲೇಷಣೆ ಮಾಡುತ್ತಿದ್ದ. ನಗುವಳ್ಳಿಯ ಯಜಮಾನರುಗಳು ಮಾಚಪ್ಪನ ಆಪಾಧನೆ ಕೇಳಿ ಒಂದೆಡೆ ಸೇರಿ ನ್ಯಾಯಮಾಡುವುದಾದರೆ ಅಪರಾಧಿಯಾದವನ ಹಾಜರಾತಿ ಖಡ್ಡಾಯವೆಂದು ತಿಳಿಸಿದರು. ಕೆಂಗಾಲು ಬಂದೊಡೆನೆ ಅವನಪ್ಪನನ್ನು ಕರೆಸಿ ನ್ಯಾಯ ತೀರ್ಮಾನ ಮಾಡುವುದಾಗಿ ಮರ್ಯಾದಸ್ತನಿಗೆ ನೆಮ್ಮದಿ ನೀಡಿ ಕಳುಹಿಸಿದರು. ಕಾರ್ಯಾರ್ತವಾಗಿ ಕೆಂಗಾಲುವಿನ ಯಡವಟ್ಟು ರಾತ್ರಿಯ ದಿನ ತಂಗಿಮನೆ ಮಗುಲುಹಳ್ಳಿಗೆ ಹೋಗಿದ್ದ ಮರುಳಪ್ಪ ನ್ಯಾಯಸ್ತರು ತಮ್ಮ ತಮ್ಮ ಮನೆಯಲ್ಲಿಯೇ ತೀರ್ಪಿನ ಕುರಿತು ಸಮಾಲೋಚನೆ ನಡೆಸಿ ಮುಗಿಸುವುದರೊಳಗೆ ತನ್ನ ಮನೆ ತಲುಪಿದ್ದ. ಊರಜನರಲ್ಲಿ ಕೆಲವರು ಉಪ್ಪು ಕಾರ ನೆಕ್ಕುತ್ತಿದ್ದವರೆ, ಎಷ್ಟೋ ಬಾರಿ ಛೀ, ಥೂ, ಎಂದು ಉಗಿಸಿಕೊಂಡಿದ್ದವರೆ, ಮರುಳಪ್ಪನ ಮಗನ  ಹೊಸ ಒಗ್ಗರಣೆಯನ್ನು ಸಿಕ್ಕಿದಂತೆ ಸವಿದಿದ್ದರು. ಮರ್ಯಾದೆ ಲೋಪ ಸಹಿಸದ ಮರುಳಪ್ಪ ಮನೆಯೊಳಗೆ ತನ್ನ ಆಕ್ರೋಷ ತೋರುತ್ತಾ, ಕೆಂಗಾಲುವನ್ನು ಹೊಗಳುವಲ್ಲಿ [ ಹುಗುಳುವಲ್ಲಿರೋಷಗೊಂಡಿದ್ದನು. "ಇವನಂತ ಮಗ ಹುಟ್ದೆ ಹೋಗಿದಿದ್ರೆ ನಮ್ಮನೆ  ಈವತ್ತು ಊರ್ ಬಡ್ಡಿಮಕ್ಲತ್ರ ಮಾತ್ ಕೇಳಂಗಿಲ್ಲ, ಏನೋ ಗೇಯ್ತನಂತ ಒಂದೆರೆಡು ತುತ್ತು ಹೆಚ್ಚಾಗಿಕ್ಕಿದ್ದೆ ಇವ್ನ್ಗೆ ತೆವ್ಲು ಬತ್ತದೆ ಅಂದಿದ್ರೆ ವಿಷನಾದ್ರು ಹಾಕಿ ಸಾಯ್ಸ್ತಿದ್ದೆ. ಒಕ್ಕಲಿಗೆ ಅಂತ ಸೂರುಮಾಡಿ, ಕಂಡೋರ್ ಮನೆ ಜೀತಮಾಡಿ ನನ್ಮಂಗಂಗಾಗೆ ಜೀವತೇದೆ. ಏನು ಇಲ್ದಂತದ್ದವ್ನು ಯಾರ್ ಕೂಡ ಸೇರಿ ಬುದ್ಧಿ ಕಲ್ತ್ನೊ ಶಿವ, ಆದ್ರುತನಾನು ಮಾಡ್ತಾನಂತ ಅನ್ಕೊಂಡಿತಿಲ್ಲ. ಎಂಜಲು ಹಿಂದೆ ಹೋಗೊ ನಾಯಿ ಆಗ್ಬುಟ್ಟ, ನ್ಯಾಯ ಏನೊ ಕರಿತಾವ್ರೆ ಏನಂತ ನಿಲ್ಲಪ್ಪ ನಾನು, ದ್ಯಾವೇಗೌಡ್ರು ಮನೆತಕಂಟ ಹೋಗ್ ಬತ್ತಿನಿ, ಮಗ ಬಂದ್ರೆ ಯಾರ್ನಾರ ಕಳ್ಸು" ಎಂದು ಹಂಡತಿ ದ್ಯಾವಮ್ಮನಿಗೆ ಹೇಳಿ ಹೊರಟ,, ಮಾತನಾಡುವ ಧೈರ್ಯ ಬಂದಿದ್ದರೆ ಮಗ ಎಲ್ಲಿಹೋಗಿರಬಹುದೆಂದು ವಿಚಾರಿಸಿ ಎನ್ನುತ್ತಿದ್ದಳು. ಗಂಡನ ಕೋಪಸ್ಥಿತಿಯಲ್ಲಿ ತನ್ನ ಬಾಹ್ಯತೋರ್ಪಡಿಕೆಯು ಬೆಂಕಿ ಮೇಲಣ ತುಪ್ಪವಾಗುವುದೆಂದು ಸುಮ್ಮನಾದಳು. ಅವಳ ತುಡಿತವೊಂದೆ, ಮಗ ಎಲ್ಲಿದ್ದಾನೋ ಎಂದು, ಅವಳಂತರಾಳದಲ್ಲಿ ಅವನಾಗಲೇ ಕಂಬನಿಯಾಗಿ ಜಿಗಿದು ಅವ್ವನ ಸೆರಗಮೇಲೆ, ಸಗಣಿಯಿಂದ ಬೆಳಿಗ್ಗೆ ಚೊಕ್ಕ ಗೊಂಡಿದ್ದ ನೆಲದ ಮೇಲೆ ಚುಕ್ಕಿಯಾಗಿ ಇಂಗಿಹೋಗಿದ್ದ.

            ಬಾಯಿ ಕೆಸರಿನಾಗೆ ಅದ್ದಾದ ಮೇಲೆ
            ತೊಳಿಯೋಕೆ ವಾಚನ ಬೇಕೆ?
            ಊರ ನಾಯಿ ಬೊಗಳಿದರೆ
            ಮನೆಗೆ ಕಿಚ್ಚು ಹಚ್ಚುವೆ ಏಕೆ?

     ಶುಕ್ರವಾರ ಪೂರ ಅಲ್ಲೆ ತೋಟದ ಬಳಿ ಅವಿತು ಕುಳಿತಿದ್ದ ಕೆಂಗಾಲುವಿಗೆ ಎಳನೀರು, ಕೊಬ್ಬರಿ ಕಾಯಿ ಅವತ್ತಿನ ಆಹಾರವಾಗಿತ್ತು. ದುಮ್ಮಾನ ಅತಿಯಾಗಿ ಪೇಟೆಕಡೆಗೆ ಹೋಗಲೇ ಬೇಕೆಂದು ಮನಸ್ಸು ಮಾಡಿ ಇಳಿಸಂಜೆಯಲ್ಲೊಂದು ಚಳಿಮಾಯವಾಗೊ ವಿಷಯಕ್ಕೆ ಕಾಲುಕಿತ್ತ. ನಡೆದೇ ಪೇಟೆ ಸೇರುವ ಹೊತ್ತಿಗೆ ಬೀದಿಗಳಲ್ಲಿ ಬೆಳಕು ಪ್ರಜ್ವಲಿಸುತ್ತಿತ್ತು. ಪಟ್ಟಣದ ಬಾರು ಬೀದಿಗೆ ಅಪರೂಪಕ್ಕಾಗಮಿಸಿದ್ದ ಕೆಂಗಾಲು ಅಂತೂ ಅಂಗಡಿ ಸಮೀಪಿಸಿದ. ಕಂಡ ವಿವಿದ ಬಾಟಲಿಗಳಲ್ಲಿ ಯಾವುದನ್ನು ಕುಡಿಯುವುದೆಂದು ತಿಳಿಯದೆ ಕಂಡ ಅಷ್ಟು ಬಾಟಲಿಗಳಲ್ಲಿ ಒಂದಕ್ಕೆ ಬೆರಳು ಮಾಡಿ ತೋರಿಸಿದ. ಬಾರಿನವ ಮತ್ತೊಂದು ಪಕ್ಕದನ್ನು ತೋರಿಸಿದ್ದಕ್ಕೆ ಹೂಂ ಎಂದವ ಯಾವುದನ್ನಾದರು ಅಂದು ಕುಡಿಯಲೇ ಬೇಕಿತ್ತು. 40 ಎಂದಾಗ ಯಾವುದಕ್ಕೆಂದು ತಿಳಿಯದೆ ಸುಮ್ಮನೆ ನೋಡುತ್ತಿದ್ದಾನೆ. ಬಾರಿನವ ಮತ್ತೆ ಶಬ್ದಮಾಡಿ ಬೇಗ ಕೊಡಿ ಎಂದ. ತನ್ನ ಹೆಂಡದಾಸೆಯನ್ನು ನೀಗಿಸಿಕೊಳ್ಳಲು ಅಷ್ಟು ದುಬಾರಿಗೆ ಕೆಂಗಾಲು ಎಂದೂ ಹೋಗಿರಲಿಲ್ಲ. ಉದ್ವೇಗದಲ್ಲಿದ್ದವ ಅವನೆತ್ತರ ಕೇಳಿದ್ದರು ಕೊಡುತ್ತಿದ್ದ. ಆದರೆ ಅವನತ್ತಿರವಿದ್ದುದೆಲ್ಲ ಬರಿ ಅವಮಾನವೆ. ಪಂಚೆ ಎತ್ತಿ ಸ್ವಲ್ಪ ಸಮಯದ ಹಿಂದೆ ಒಳಚಡ್ಡಿ ಕಳ್ಳಜೇಬಿನಲ್ಲಿಟ್ಟದ್ದ 23 ರೂಪಾಯಿ  ತೆಗೆದಿಟ್ಟನು. 7 ರೂಪಾಯಿಗಾಗಲೆ ರಸ್ತೆ ಬದಿಯ ಅಜ್ಜಿ ಬೋಂಡ ಅವನ ಹೆಗಲೇರಿದ್ದವು. ಇದ್ದ ಹಣವನ್ನು ಚಾಚು ತಪ್ಪದೆ ಮುಂದಿಟ್ಟ ಕೆಂಗಾಲು ಬಾರಿನವನ ಮೌನ ಸ್ಥಿತಿ ನೋಡಿ ಗಲಿಬಿಲಿಯಾದ. ಹಾಗೆ ಏನು ಮಾಡದೆ, ಏನು ಕೇಳದೆ ಸುಮ್ಮನಿದ್ದದರಿಂದ ಸಾಮಾನ್ಯ ಜ್ಞಾನ ಪ್ರವೃತ್ತನಾದ ಕೆಂಗಾಲು ತಾನೇ ಚಟುವಟಿಕೆಯಾಗಿ, ಅವ್ವ ತೊಡಿಸಿದ್ದ ತಾತನ ಕಾಲದ ಬೆಳ್ಳಿ ಉಡದಾರ ನೆನಪಾಗಿ, ಬೇಡವೆಂದೇ ಕೈ ಇಟ್ಟೊಡನೆ ಸಲೀಸಾಗಿ ಕೈ ಸೇರಿತ್ತು. ಬಾರಿನವನ ಮುಂದಿಟ್ಟ. ಮಜ್ಜನ ಕಾರ್ಯ ಮರೆತಿದ್ದವನ ಬೆಳ್ಳಿ ಉಡದಾರ ಮಾಮೂಲಿಗಿಂತ ಸ್ವಲ್ಪ ತೂಕವೆ ಇತ್ತು. ಅಂತೂ ಬಾಟಲಿ ದಕ್ಕಿತ್ತು. ಹಿಡಿದು ಹೊರನಡೆದು ಸರಸರನೆ ತನ್ನೂರಿನ ದಿಕ್ಕಿನೆಡೆಗೆ ಮರ, ಮಂಟಿ, ಗಿಡ, ಗದ್ದೆ, ಹೊಲ, ಹಳ್ಳ, ಮುಳ್ಳುದಾರಿ, ಕಲ್ಲು ಏರಿ ದಾಟಿ ನೀಲ್ಗೆರೆಯ ದಡಕ್ಕೆ
ಬಂದು ಅವನ ತೋಟಕ್ಕೆ ಹೊಕ್ಕು  ಅಲ್ಲೆ ತುಂಬ ದಿನದಿಂದ ಬಿದ್ದಿದ್ದ ಮಡಕೆ ಸಹಾಯದಿಂದ ಪಟ್ಟಣದ ಪೂರ್ತಿ ಮತ್ತುರಸ ಹೀರಿದ್ದ,,ಬೋಂಡದ ಸಹಾಯದಿಂದ,,

            ಅಜ್ಞಾನ ಮಸೆದ ಸಂಚಿಗೆ
            ಅಲೆಮಾರಿಯಾದನೋ ಕೆಂಗ,,
            ಬರಿ ಬಾವಿಯೊಳಗಿದ್ದ ಕಪ್ಪೆ
            ಕಡಲೊಳು ದಿಕ್ಕುತೋಚದೆ ಹಿಂ,,

   ತೋಟದ ಕಗ್ಗತ್ತಲಿನಿಂದ ಹೊಲದ ಬೆಳದಿಂಗಳೆಡೆ ಬಂದವನಿಗೆ ಬೇವಿನ ಮರಕ್ಕೇರುವ ಮನಸ್ಸು ಬಂದೋಯಿತು. ಅಪ್ಪನ ಹತ್ತಿರ ನಡೆದದ್ದು ಹೇಳುವ ಧೈರ್ಯವಿಲ್ಲ. ಊರಿನವರು ನಂಬಿದ್ದು ಸುಳ್ಳೆಂದು ಸಾಭೀತು ಪಡಿಸುವ ಪ್ರಜ್ಞಾವಂತನಲ್ಲ. ಅವ್ವನಿಗೆ ಮುಖ ತೋರಿಸುವ ಸಭ್ಯದ ಸ್ಥಿತಿ ಅವನದಲ್ಲ. ಲೋಕವನ್ನೇ ತಾನೊತ್ತಿರುವ ಭಾವ. ಅತ್ತದ್ದೂ ಅಪರೂಪ. ಅಪ್ಪಲೋದ ಒಂದು ಸಲಕ್ಕೆ ಇಷ್ಡು ಶಿಕ್ಷೆ. ಪ್ರತಿನಿತ್ಯವು ತನ್ನ ಊರಿನವರು ಮಾಡಿತಿದ್ದ ನೀಚ ಕೃತ್ಯ ಒಮ್ಮೊಮ್ಮೆ ಕಣ್ಣಾರೆ ಕಂಡು ಮರೆಯಾಗುತ್ತಿದ್ದ ಕೆಂಗಾಲುವಿಗೆ ಇದು ಅಪರಾಧ ಮಾಡದವನಾಗಿದ್ದರು ಅಪರಾಧಿ ಮನೋಭಾವ ಎದೆಯನ್ನಾವರಿಸಿತ್ತು. ಮುಗ್ಧತ್ವ, ಅನಕ್ಷರತೆ, ಒಳ್ಳೆತನ, ಮೌನ ಸ್ವಭಾವ, ಗೋವಿನ ಬಾಳಿನ ಕೆಂಗ ಕುಸಿದು ಅಲ್ಲೆ ಮಲಗಿದ.
 
 ಅರಳೀಕಟ್ಟೆಯ ಬಳಿ ಅಪರಾಧಿಯಾಗಿ ಕೆಂಗಾಲು, ಅವರಿವರ ಮಾತು ನಂಬಿ ಮಗನ ಕಂಡು ಕೆಂಡವಾಗುತ್ತಿರುವ ಮರುಳಪ್ಪ, ನಂಬದೆ ತನ್ನ ಕಂದನಪರ ದೇವರ ನೆನೆಯುತ್ತಿರುವ ಹನಿಗಣ್ಣ ತಾಯಿ. ಸಮೂಹದ ಗೊಣಗಾಟ "ಸಮಯಕ್ಕೊಂದು ಹೆಣ್ಣು ಕಟ್ಟದೆ ಹೋದರೆ ತಮ್ಮ ಮಕ್ಕಳು ಮುಂದೊಂದು ದಿನ ಹಾಳು ಕೆಂಗಾಲುವಿನಂತಾಗುವರೆಂದು" ಹಗಲಗಣ್ಣು ಬಿಡುತ್ತಾ ನೋಡುತ್ತಿದ್ದಾರೆ. ಮಾಚಪ್ಪ ಸಾರಿ ಸಾರಿ ತಾನೆ ಕಣ್ಣಾರೆ ಕಂಡುದುದಾಗಿಯೂ, ಇವನು ನೀಚಕೃತ್ಯಕ್ಕೆ ಸಂಚುಹಾಕಿ, ಚೆನ್ನೀರಮ್ಮನನ್ನು ಅತ್ಯಾಚಾರಕ್ಕಾಗಿ ಪ್ರಯತ್ನಿಸುತ್ತಿದುದಾಗಿಯೂ, ತಾನು ತಡೆದುದಾಗಿಯೂ, ಕೆಂಗಾಲು ತನ್ನ ಮೇಲೆ ಕೈ ಮಾಡಿದುದಾಗಿಯೂ, ನಂತರ ತನ್ನನ್ನು ಹೊರತಳ್ಳಿ ನೀಚಕೃತ್ಯ ಎಸಗಿದಾಗಿಯೂ, ಇಂತವರು ಹಳ್ಳಿಗೆ ನಾಲಯಕ್ಕೆಂದಾಗಿಯೂ, ವಾದ ಮಾಡಿ ಸುಮ್ಮನಾದ.ನಿರರ್ಗಳ ಮಾತುಗಾರಿಕೆಗೆ ಒಂದು ಚಪ್ಪಾಳೆಯೂ ಇಲ್ಲ. ಕೆಂಗಾಲುವಿನ ಬಗ್ಗೆ ತಿಳಿದಿದ್ದವರೂ ಇದನ್ನೆಲ್ಲಾ ನಂಬಲೂ ಇಲ್ಲ.



            ಆಪಾದನೆ ಅಪರಿಮಿತವಾದರೂ
            ಸತ್ಯಕುಂಟೆ ಎಂದಾದರೂ ಸಾವು,,
            ನಿವೇಧನೆ ಜನ್ಮತಾಳುವುದಂತೆ
            ಹೊಂದಿದ ಮೇಲೆ ಅರಿವಿನ ನೋವು,,

     ಚೆನ್ನೀರಮ್ಮನಿಗೊಂತರ ಪಾಪ ಪ್ರಜ್ಞೆ ಕಾಡಲಾರಂಭಿಸಿತು. ಇನ್ನೇನು ಊರಿನಿಂದ ಬಹಿಷ್ಕಾರ ಹಾಕುವ ತೀರ್ಪು ಹೊರಬೀಳುವ ಸಮಯ. ಮೌನಿಯಾಗಿದ್ದ ಕೆಂಗಾಲುವಿನ ತಾಳ್ಮೆ ಬಲಿತು, ಅತ್ಯಾಚಾರ ಮಾಡಿಯೇ ಬಿಟ್ಟನೆಂಬ ಕೂಗಿಗೆ ಪ್ರತ್ಯುತ್ತರವಾಗಿ ಸತ್ಯವಾಗಿದ್ದ ತನ್ನ ತಪ್ಪೇನಿಹುದೆನ್ನುವ ಪ್ರತ್ಯಾಪಾದನೆಯನ್ನು ನೊಂದು ಬಳಲುತಿದ್ದ ತಾಯಿಗಾಗಿ ಹೊರಹಾಕಿದನು. ಹೇಳಿದ್ದು ಒಂದೇ ಮಾತುತಾನು ಅಲ್ಲಿದ್ದದ್ದು ದಿಟ,ಆದರೆ ಮಾಚಪ್ಪನೋರು ಆಟೊತ್ನಾಗೆ ಅಲ್ಲಿಗ್ಯಾಕೆ ಬಂದಿದ್ದರು ಎಂದು. ನ್ಯಾಯದಲ್ಲಿ ಹೊಸ ಪ್ರಶ್ನೆಗಳ ಗೊಂದಲ, ರಾತ್ರಿಯಿಡೀ ಮಗ್ಗಲಿನಲ್ಲಿರದ ಇವರು ಅಲ್ಲಿಗೇಕೋಗಿದ್ದರೆಂದು ಊಹಿಸಿಕೊಂಡ ಮುಗ್ಧ ಹೆಣ್ಣು ಮಗಳು ಮಾಚಪ್ಪನ ಪತ್ನಿ ಸೀತಕ್ಕ ಮೊದಲಿಂದಲೂ ಇದ್ದ ಸಂಶಯಕ್ಕೆ ತೆರೆ ಎಳೆದಂತಾಗಿ, ಅವಮಾನಿತಳಾಗಿ ತಲೆತಗ್ಗಿಸಿ ಬಿರಬಿರನೆ ಹೊರನಡೆದಳು. ಚೆನ್ನೀರಮ್ಮನು ಘಟನೆ ನಡೆದಾಗಿನಿಂದ ಮಾಡದ ತಪ್ಪಿಗೆ ಪರದಾಡುತ್ತಿರುವ ಕೆಂಗಾಲು ಕಂಡು ಮರುಗಿ ಇದ್ದ ಸತ್ಯವನ್ನು ನೇರವಾಗಿ ನುಡಿದಳು; ಮಾಚಪ್ಪ ಕಕ್ಕಾಬಿಕ್ಕಿಯಾದ, ಗಲಿಬಿಲಿಗೊಂಡ. ತಾ ಮಾಡಿದ ಸಂಚು ಇಡೀ ಸಂತೆಯಲ್ಲಿ ತನ್ನ ಮರ್ಯಾದೆ ತೆಗೆವುದೆಂದು ಕೊಂಚವೂ ಊಹಿಸದವ ಈಗ ಹಿಂಗು ತಿಂದ ಮಂಗ, ಸ್ವಲ್ಪ ಉದ್ವೇಗದಿಂದ ಹೇಳುವುದಾದರೆ ಮುಗ್ದತ್ವದ ವ್ಯಕ್ತಿತ್ವವನ್ನು ಮೆಟ್ಟಿನಿಲ್ಲಬೇಕೆಂದು ಬಯಸುವ ಅದಾವ ಮನುಷ್ಯನಾದರು ಭಗವಂತನ ಚಕ್ರವ್ಯೂಹದಲ್ಲಿ ಸಿಲುಕಲೇ ಬೇಕು. ಮುಗ್ಧತೆ ಎಂಬುದು ಮುಖವಾಡವಲ್ಲ, ಯಾರಿಗೂ ಕೆಡುಕು ಬಯಸದ ಗೋವಿನಂತೆ, ಮಡಿಲಲ್ಲಿ ಮಲಗಿ ಸೃಷ್ಟಿ ಕೆಣಕೊ ನೋಟ ಬೀರೊ ಮಗುವಿನಂತೆ. ಅಪರಾಧಿ ಮಾಚಪ್ಪನು ಮೊದಲಿಂದಲೂ ಹಳ್ಳಿಯಲ್ಲಿ ಉತ್ತಮನ ಮುಖವಾಡ ಹಾಕಿದ್ದವನು, ಅನೇಕರಿಗೆ ಯದ್ವಾತದ್ವಾ ತತ್ವ ಹೇಳುತ್ತಿದ್ದವನು, ಜೊತೆಗೆ ಹಣವಂತನು..ಆತನಿಗೆ ಹೆಚ್ಚಾಗಿ ಹೇಳದೆ ಮುಖ್ಯಸ್ಥರು ತಲೆತಗ್ಗಿಸಿ ತಮ್ಮ ತಮ್ಮ ದಿಕ್ಕಿನೆಡೆಗೆ ತೆರಳಿದರು. ತಕ್ಕ ಪಾಠವಾದ ಮಾಚಪ್ಪ ತನ್ನೆಲ್ಲಾ ವೇಷ ಅಲ್ಲೆ ಕಳಚಿಟ್ಟವನಂತೆ ಬಿರಬಿರ ನಡೆದ. ಮರುಳಪ್ಪಾ ಮೌನಿಯಾಗಿ ಮನೆಕಡೆ ನಡೆದ. ಅವ್ವ ಕೆಂಗಾಲುವನ್ನು ಹಿಡಿದು ಮನೆಕಡೆ ಸೆಳೆಯಲೋಗಲು ಮಿಕ್ಕಿದನ್ನು ಅಗೆದು ಬರುವೆನೆಂದು ತಿಳಿಸಿ ಕೆಂಗಾಲು ನೀಲ್ಗೆರೆಯ ತೋಟದೆಡೆಗೆ ನಡೆದ..ಹೊರ ನಡೆದ ಒಬ್ಬೊಬ್ಬರಲ್ಲೂ ಅನೇಕ ರೀತಿಯ ಪಲಿತಾಂಶ, ಜೀವನ ಪಾಠ.

                ಮಾತಿನ ಹೊಳಗಿನ ಮರ್ಮವರಿಯದ
                ನ್ಯಾಯಕದು ಅರಳೀ ಕಟ್ಟೆ
                ಮೌನದ ಕಟ್ಟೆ ಹೊಡೆದೋದ ಮೇಲೆ
                ಜೀವನ ಹರಿಯ ನೀ ಬಿಟ್ಟೆ,,

     ಜವಬ್ದಾರಿ, ಹಟ, ಜೀವನ ಅರ್ಥವಾಗುವುದು ಕಷ್ಟದ ಸಂಧರ್ಭ, ಸನ್ನಿವೇಶ ವ್ಯಕ್ತಿಗೆ ಒದಗಿ ಬಂದಾಗಲೇ. ಅಂತೂ ಕೆಂಗಾಲುವಿಗೆ ರಕ್ಷಣೆ ಪಡೆಯುವ ಒಂದೊಂದೆ ಕಾರ್ಯತಂತ್ರಗಳು ಅನುಭವ ಮೂಲಕವೇ ತಿಳಿಯುತ್ತಾ ಸಾಗಿತು. ಕಳೆದ ಮೂರು ದಿನದಿಂದ ತನ್ನ ಜೀವನದಲ್ಲಿ ನಡೆಯುತ್ತಿರುವ ವಿಪತ್ತುಗಳನ್ನು ನೆನೆದು ಅದಕ್ಕೆ ಪರಿಹಾರ ಏನೆಂದು ತಿಳಿಯದೆ, ಜೀವನದ ಪ್ರಾರಂಭದ ದಿನಗಳನ್ನು ನೆನೆದು, ಅವುಗಳಲ್ಲಿನ ನೆಮ್ಮದಿಯನ್ನು ಹರಸಿದನು. ಅಪ್ಪ ಆಗ ಹೀಗಿರಲಿಲ್ಲ. ಮುದ್ದು ಮಾಡುತ್ತಿದ್ದ. ಕೇಳಿದ್ದನ್ನು ಪಟ್ಟಣದಿಂದ ಪೊಟ್ಟಣದಲ್ಲಿ ಕಟ್ಟಿ ತಂದು ಕೊಡುತ್ತಿದ್ದ.
ನೀಲ್ಗೆರೆಯ ಸಣ್ಣ ಮೀನು, ಏಡಿ, ಹಿಡಿಯುತ್ತಿದುದು, ಹಕ್ಕಿಯ ಗೂಡುಗಳನ್ನು ತಂದು ಮಾಮರಕ್ಕೆ ಸ್ವಂತವಾಗಿ ಕಟ್ಟಿ ಹಕ್ಕಿ ಕರೆದಿದ್ದುದು, ಗೆಳೆ ತಿಮ್ಮರಾಯನೊಡನೆ ಕಾಡು ಹಲಸು, ನೆಲ್ಲಿಕಾಯಿ, ನೇರಳೇ ಹಣ್ಣಿಗಾಗಿ ಪಕ್ಕದ ನೀಲ್ಗೆರೆಯಾಚಿನ ಕಾಡಿನಲ್ಲಿ ಅಲೆದಾಡಿದ್ದು, ಅಪ್ಪ ಹೊಡೆದದ್ದು, ಅವ್ವ ಹತ್ತಿದ್ದು, ಜ್ವರ ಬಂದು ಮಲಗಿದಾಗ ಮಾಚಪ್ಪನ ಹಂಡತಿ ಸೀತಕ್ಕ ಪೂಜೆ ಮಾಡುತ್ತಿದ್ದುದು, ಒಂದೊಂದಾಗೆ ನೆನಪಿನ ಬುತ್ತಿಯಿಂದ ವಾಸ್ತವ ಸ್ಥಿತಿಗೆ ಆಗಮಿಸಿದ್ದವು. ನೆನೆದು ಅದರೊಡನೆ ಜೀವನಕ್ಕೊಬ್ಬಳು ಸಂಗಾತಿಯು ಬೇಕೆನ್ನುವ ಇಂಗಿತ ಅವನಿಗೆ ಮೊದಲಿಂದಲೂ ಇತ್ತು. ಈಗ ಅದು ಮತ್ತಷ್ಟು ಹಸಿಯಾಯಿತು.





                ನವಬಾಳಿಗೀಗ ಚೈತನ್ಯ ತುಂಬುವ ಹೆಣ್ಣು
                ನಿನಗಾಗೆ ಬರೆಯುತಿದೆ ಕಾಲ,,
                ಹೊಸಬೆಳಕು ಅವರಿವರ ಪಾಲಿದ್ದರೇನು
                ದುಡಿಮೆಯೇ ಸಾಧನೆಯ ಮೂಲ

     ಮಗಲು ಹಳ್ಳಿಯ ಅಪ್ಪನ ತಂಗಿಯ ಮಗಳು ಸಾತಿಯೊಡನೆ ಮಧುವೆ ಮಾಡಬೇಕೆಂದು ಮನೆಯವರು ಮಾತನಾಡುತ್ತಿದ್ದು ಇವನ ಗಮನಕ್ಕೆ ಬಂದಿತ್ತು. ಆಗ ಈಗಲೇ ಬೇಡ ಎಂದಿದ್ದವನು ಈಗ ಈಗಲೇ ಆಗಬೇಕು ಎನ್ನುವ ಆಸೆಯನ್ನು ಮನೆಯವರ ಮುಂದಿರಿಸಲು ನಾಚಿಕೆ ಅಡ್ಡಿಯಾಗತೊಡಗಿತು ಕಲ್ಪನೆಯಲ್ಲೆ. ಮಿಕ್ಕಿದ್ದನ್ನು ಅಗೆದು ಹಸಿದು ಹಣ್ಣಾಗಿ ಮನೆಕಡೆ ನಡೆದ.

    ಅದಾಗಲೆ ಮರುಳಪ್ಪ, ದೇವಮ್ಮ ಮಗನ ಮಧುವೆಯ ಕುರಿತು ಚರ್ಚಿಸಿದ್ದರು. ಮಗ ಬಂದೊಡನೆ ಅದರ ಕುರಿತಾಗಿ ಕೇಳಬೇಕೆಂದು ಕಾದಿದ್ದರು. ಬಂದ ಸಪ್ಪಳ ಕೇಳಿ ಅವ್ವ ಎದ್ದು ಮಗನಿಗೆ ಕೈ ಕಾಲಿಗೆ ನೀರು ಕೊಟ್ಟು , ಅವನು ಫಜೀತಿ ಮಾಡಿಕೊಂಡಿದ್ದ ರಾತ್ರಿ ಅವನಿಗೆಂದೆ ಮಾಡಿ ತಾವು ತಿಂದು ಇನ್ನು ಅಷ್ಟನ್ನು ಮುಚ್ಚಿಟ್ಟಿದ್ದ ಒಬ್ಬಟ್ಟಿನ ಗಂಟನ್ನು ಬಿಚ್ಚಿಟ್ಟಳು. ಹಸಿದವ ಸಂತೃಪ್ತಿಯಿಂದ ತಿನ್ನ ತೊಡಗಿದ. ಅವ್ವ ಅಪ್ಪನ ಆಜ್ಞೆಯಂತೆ ಮಧುವೆ ವಿಷಯ  ಪ್ರಸ್ತಾಪಿಸಿದಳು. ಮೌನವಾಗೆ ಸಮ್ಮತಿ ಸೂಚಿಸಿದ. ಎಲ್ಲರ ಒಪ್ಪಿಗೆಯ ಮೇಲೆ ಮಗುಲುಹಳ್ಳಿಯಲ್ಲೆ ಕೆಂಗಾಲು-ಸಾತಿಯ ಮಧುವೆ ನಡೆಯಿತು. ಹೊಸ ಜೀವನಕ್ಕೆ ಕಾಲಿಟ್ಟ ಇಬ್ಬರು ಸಂಸ್ಕಾರವಂತಿಕೆಯಿಂದ ಸಂಸಾರ ನಡೆಸಿ ಅಡ್ಡದಾರಿಯ ಉಪಲಬ್ಧತೆಯನ್ನು ಅರಿತಿದ್ದ ಕೆಂಗಾಲು ನೈತಿಕತೆಯಿಂದ ನೆಮ್ಮದಿ ಕಂಡಿದ್ದ. ಸಾತಿಯು ಗಂಡನನ್ನು ಪ್ರೀತಿಯ ಕಡಲಲ್ಲಿ ತೇಲಿಸುತ್ತಲೇ ವರುಷದೊಳಗೆ ಒಂದು ಗಂಡು ಒಂದು ಹೆಣ್ಣು ಅವಳೀ ಮಕ್ಕಳಿಗೆ ಜನ್ಮ ನೀಡಿದಳು. ಕಾಲ ಕಳೆದು ಅವಕ್ಕೀಗ ಎಂಟು ವರ್ಷ. ಇನ್ನೂ ಪುಟ್ಟ ಗೂಡಿನ ಆರು ಹಕ್ಕಿಗಳ ತುಂಬು ಸಂಸಾರಕ್ಕೆ ದಿನವು ಹಬ್ಬವೆ. ಮಕ್ಕಳಿಬ್ಬರು ಊರ ಶಾಲೆಯ ಎರಡನೆ ತರಗತಿ ವಿದ್ಯಾರ್ಥಿಗಳು.
ಕಲಿಯದ
ಕೆಂಗಾಲು ಶಾಲೆಯ ಶಿಕ್ಷಕರಲ್ಲಿ ಮುಗ್ಧವಾಗಿಒಸಿ ಚೆನಾಗ್ ಯೋಳ್ಕೊಡಿ ಸಾ, ನಮ್ಮೊಂಗ್ ಆಗೋದ್ ಬ್ಯಾಡ ಎಂದು ಬೇಡುವನು. ಪ್ರಜ್ಞಾವಂತ ಶಿಕ್ಷಕ ಕೆಂಗಾಲುವಿನ ಬೆನ್ನು ತಟ್ಟಿಓದದಿದ್ದರೂ ಹಾದಿ ತಪ್ಪಲಿಲ್ಲ ನೀನು ಎಂದು ರೇಗಿಸುವರು.


                ಬೆನ್ನಲ್ಲೆ ಬಾಯಾರಿ ಜ್ಞಾನ ಧಣಿದಿಹುದು           

                 ಜೀವ, ಭಾವ ಅರಿಯದಲೆ
                 ಏಕೆ ಸಾಕು ಕಲಿತದ್ದು ಈಗ
                 ಕಲಿಯಲೆಂದೆ ಕಾಲ ಹಸಿಹಸಿರ ಎಲೆ,,

                 ಮಸ್ತಕ ವಿಸ್ತಾರ ಗಡುವಿನೊಳಗಿಲ್ಲ
                 ಇತಿ ಮಿತಿ ತಡೆಯಾಜ್ಞೆಗಳಿಲ್ಲ
                 ಪುಸ್ತಕದಲ್ಲಡಗಿರೊ ಜ್ಞಾನಾಮೃತವನ್ನು
                 ಹೆಕ್ಕಿ ಹೆಕ್ಕಿ ಕುಡಿದಾಗ ನಾವು ಮೂಡರಲ್ಲ 
                 ಬದಲಾಗಬೇಕು ಬದಲಾವಣೆಗೆ
                 ಬಯಕೆಗಳೆಷ್ಟಿರಲಿ ಬಿಡು ಅವಾಗುವವು
                 ಕನಸುಗಳಿಲ್ಲದವನ ಬಳಿ
                 ನಾ ಕಾಣುವುದೇನೋ ನೂತನ ಹೂವು,,

                 ಪ್ರತಿದಿನ ಹೊಸತನ ಗಳಿಸುವ ಹೊಸಜನ
                 ಸುತ್ತಮುತ್ತಲಲ್ಲೆ ಶಬ್ಧಮಾಡುತಿರುವಾಗ
                 ದೇಹ ಬುದ್ಧಿ

                 ಯಾರಿಗೇನೂ ಕಡಿಮೆಯಿಲ್ಲ ಬನ್ನಿ ಬನ್ನಿ ಬೇಗ,,,,

2 comments:

  1. Replies
    1. ಧನ್ಯವಾದಗಳು ಸಾರ್,,ನಿಮ್ಮ ಅನಿಸಿಕೆಗಿನ್ನ ಓದಿದ್ದೀರಿ ಎಂಬ ತೃಪ್ತಿ ಹೆಚ್ಚು.

      Delete