Wednesday 8 December 2021

ತಂಬಾಕು ಮಾರುಕಟ್ಟೆ ಮತ್ತು ರೈತ

 ತಂಬಾಕು ಮಾರುಕಟ್ಟೆಯೋ ಅಥವಾ ಲಂಚ ವಸೂಲಿಗರ ಜೇನುಗೂಡೋ...


ಹುಣಸೂರು ಪಿರಿಯಾಪಟ್ಟಣ ಹೆಚ್ ಡಿ ಕೋಟೆ ತಾಲ್ಲೂಕುಗಳ ಸರಿಸುಮಾರು ಹೆಚ್ಚು ರೈತರ ನೆಚ್ಚಿನ ಬೆಳೆ ತಂಬಾಕು. ಸ್ಥಳೀಯ ಭಾಷೆಯಲ್ಲಿ ಹೇಳುವುದಾದರೆ ಹೊಗೆಸೊಪ್ಪು. ಕಾಸಿನ ಬೆಳೆ ಎಂದೆ ಖ್ಯಾತಿಯಾಗಿರುವ ಬೆಳೆ ಇತ್ತೀಚೆಗೆ ಬಂಡವಾಳ ಬೆಟ್ಟದಷ್ಟು ಆದಾಯ ಅಂಗೈಯ್ಯಗಲ ಅನ್ನುವಂತಾಗಿದೆ. ಕೂಲಿ, ಗೊಬ್ಬರ, ಕೀಟನಾಶಕ, ಪೆಟ್ರೋಲ್ ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹೊತ್ತಿನಲ್ಲಿ ಕೃಷಿಯ ಬಡವಾಳದಲ್ಲಿ ಬಹಳಾ ಬದಲಾವಣೆಗಳಾಗಿವೆ. ಮೂರು ಲಕ್ಷ ಆದಾಯ ಗಳಿಸುವ ರೈತನೊಬ್ಬ ಎರಡು ಲಕ್ಷ ಬಂಡವಾಳ ಹೂಡಬೇಕಿದೆ. ಆ ಒಂದು ಲಕ್ಷ ಲಾಭಕ್ಕಾಗಿ ಇಡೀ ಕುಟುಂಬ ಹಗಲಿರುಳೆನ್ನದೆ, ಮಳೆಬಿಸಿಲೆನ್ನದೆ, ದುಡಿಯಬೇಕು. ಎರಡು ಲಕ್ಷ ಸಾಲದ ಬಡ್ಡಿಗೆ ಸಾಕಾಗುವ ಆದಾಯ ನಂಬಿಕೊಂಡ ರೈತ ಮೈಮುರಿದು ದುಡಿದು ರಾತ್ರಿ ನೆಮ್ಮದಿಯ ನಿದಿರೆಯ ಕನಸು ಕಾಣುವಂತಾಗಿದೆ. 


ಈ ಭಾಗದ ಜನರಿಗೆ ಅನಿವಾರ್ಯವಾಗಿರುವ ಹೊಗೆಸೊಪ್ಪು ಈಗ ಲಾಭದಾಯಕವಲ್ಲದ ಬೆಳೆಯಾಗಿದೆ. ಅಕಾಲಿಕ ಮಳೆ, ಅಧಿಕ ಬಂಡವಾಳ ಮತ್ತು ಹೊಗೆಸೊಪ್ಪಿಗೆ ದೊರಕುವ ಕಡಿಮೆ‌ ಬೆಲೆ ಇದಕ್ಕೆ ಮುಖ್ಯ ಕಾರಣ. ಆದರೂ ಇಲ್ಲಿನ ರೈತ ಹೊಗೆಸೊಪ್ಪಿಗೆ ಜೋತುಬೀಳಬೇಕು. ಬ್ಯಾಂಕಿನ ಸಾಲ, ವ್ಯವಸ್ಥೆ, ಅನುಭವ ಹಾಗೂ ಕುಶಲತೆ ಹೊಗೆಸೊಪ್ಪಿನ ಕೃಷಿಯನ್ನೇ ಅವಲಂಭಿಸಲು ಕಾರಣಗಳು. ಬೇರೆ ತರಕಾರಿ ಬೆಳೆಗೆ ಮರಳಲು ಮಾಡಿಕೊಂಡಿರುವ ಸಾಲ, ಆ ಹೊಸ ಬೆಳೆಗಳ ಅನಿಶ್ಚಿತ ಬೆಲೆ, ಮಾರುಕಟ್ಟೆಯ ಅನ್ಯಾಯ ಅಡ್ಡಿಯಾಗಿವೆ. 


ಏನೇನೊ ಜಂಜಾಟದ ಜೊತೆಗೆ ಸಾಕಷ್ಟು ಲಾಭದ ನಿರೀಕ್ಷೆಯಿಂದಲೇ ಬಂಡವಾಳದಲ್ಲಿ ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳುವ ರೈತ ದುಡಿದು ದುಡಿದು ನಾನಾ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಅಪೌಷ್ಟಿಕ ಆಹಾರ, ಒತ್ತಡ, ಹೊಗೆಸೊಪ್ಪಿನ ಹದದಲ್ಲಿ ಮಾನವ ಆರೋಗ್ಯದ ಮೇಲಿನ ಪರಿಣಾಮ, ಸಾಲ ಇದಕ್ಕೆ ಮುಖ್ಯ ಕಾರಣಗಳು. ಇದು ಇಂದು ನೆನ್ನೆಯದಲ್ಲ. ಇಲ್ಲಿನ ನಿಜಸ್ಥಿತಿ ಮತ್ತು ವಾಸ್ತವ ಸತ್ಯ. 


ಬೆಳೆಯನ್ನು ತನ್ನ ಮಿತಿಗಳಲ್ಲಿ ಬೆಳೆದು ಮಾರುಕಟ್ಟೆಗೆ ಬರುವ ರೈತ ಮುಕ್ತವಾಗಿ ಶೋಷಣೆಗೆ ಒಳಗಾಗುತ್ತಿದ್ದಾನೆ. ಹೊಗೆಸೊಪ್ಪನ್ನು ಹದವಾಗಿ ಬೇಲ್ ( ಹೊಗೆಸೊಪ್ಪಿನ ನೂರು ಕೆಜಿಯ ಕಟ್ಟು) ಮಾಡಿಕೊಂಡು ಮಾರುಕಟ್ಟೆಗೆ ಬರುವ ರೈತನಿಗೆ ತಂಬಾಕು ಮಂಡಳಿಗಳು ತಕ್ಕಮಟ್ಟಿಗೆ ಉತ್ತಮ ವ್ಯವಸ್ಥೆಯನ್ನೇನೊ ಕಲ್ಪಿಸಿವೆ. ನಂತರದಲ್ಲಿ ಬೆಡ್ಡಿಂಗ್ ನಡೆಯುತ್ತದೆ. ಎಲ್ಲಾ ಬೇಲುಗಳನ್ನು ಅವುಗಳ ಗುಣಮಟ್ಟದ ಆಧಾರದಲ್ಲಿ ಬೆಲೆ ನಿಗಧಿಯಾಗುತ್ತದೆ. ಉತ್ತಮ ಗುಣಮಟ್ಟದ ಸೊಪ್ಪು ಒಂದು ಕೇಜಿಗೆ 185, ಮಧ್ಯಮದ ಸೊಪ್ಪು ಒಂದು ಕೇಜಿಗೆ 160, ಕೆಳದರ್ಜೆಯ ಸೊಪ್ಪು 100. ಹೀಗೆ ಸೊಪ್ಪಿನ ಗುಣಮಟ್ಟಕ್ಕೆ ತಕ್ಕನಾದ ಬೆಲೆ ಆಗುತ್ತದೆ. ಆದರೆ ಬೆಲೆ ಹೇರಿಕೆಯ ಬಗ್ಗೆ ಯಾರೂ ಮಾತನಾಡುತ್ತಿನಲ್ಲ. ಹೇಳಬೇಕಂದರೆ ಈ ಬೆಲೆ ರೈತನ ಶ್ರಮಕ್ಕೆ ತಕ್ಕನಾದುದಲ್ಲ. ಕೋಟಿಗಳು ಲೆಕ್ಕವಿಲ್ಲದಷ್ಟು ಸಂಪಾದಿಸುವ ತಂಬಾಕು ಕೊಳ್ಳುವ ಕಂಪನಿಗಳು ಬೆಲೆ ಏರಿಸುವಲ್ಲಿ ಬಹಳ ಹಿಂದೆ ಬೀಳುತ್ತದೆ. ಈ ವಿಷಯ ಮುಂದೆ ಚರ್ಚಿಸೋಣ. 


ಈ ಬೆಡ್ಡಿಂಗ್ ಮುಗಿದ ಮೇಲೆ ಆಯಾ ಕಂಪನಿಗಳ ನೌಕರರು ಬೇಲ್‌ಗಳನ್ನು ಪರೀಕ್ಷಿಸುತ್ತಾರೆ. ಈ ಪರೀಕ್ಷಿಸುವ ಸಂದರ್ಭದಲ್ಲಿ‌ ನೇರವಾಗಿ ರೈತನ ಮೇಲೆ ದಾಳಿಯಿಡುವ ಈ ನೌಕರರು ಕಂಪನಿಯ ಕಾರ್ಮಿಕರೆ. ಸಂಬಳಕ್ಕಾಗಿ ದುಡಿಯುತ್ತಿರುವವರೆ. ಆದರೆ ಅವರಿಗೆ ಈ ಸಂಬಳದ ಬಗ್ಗೆ ಯಾವ ಗೌರವವೂ ಇಲ್ಲ. ಆಯಾ ದಿನ ಬೇಲನ್ನ ಪರೀಕ್ಷಿಸುವಾಗ ರೈತನನ್ನು ಕಾಡಿಸಿ ಪೀಡಿಸಿ ಐವತ್ತು ನೂರಿನಿಂದ ಹಿಡಿದು ಐನೂರರ ತನಕ ಪಡೆಯುವುದೇ ಇವರ ನಿಜವಾದ ಕಸುಬುಗಾರಿಕೆ. ಒಬ್ಬ ರೈತ ಐದು ಬೇಲನ್ನು ಕೊಂಡೊಯ್ದರೆ ಐನೂರು ರೂಗಳನ್ನು ಇಂತವರ ಬಾಯಿಗೆ ಹಾಕಲು ಸಿದ್ದಪಡಿಸಿಕೊಳ್ಳುತ್ತಾನೆ. ಯಾವ ಮುಚ್ಚು ಮರೆಯೂ ಇವರಲ್ಲಿಲ್ಲ. ರೈತನ ಕಷ್ಟ ಹೇಳುವವರು ಕೇಳುವವರೂ ಯಾರೂ ಇಲ್ಲ. ಕಡಿಮೆ‌ ಎಂದರೆ ಐವತ್ತು ರೂಗಳನ್ನು ಒಂದು ಬೇಲಿಗೆ ಕೊಡಲೇಬೇಕು. 


ಈ ಭ್ರಷ್ಟಾಚಾರಕ್ಕೆ ಕೊನೆಯಿಲ್ಲವೇ?

ತಂಬಾಕು ಮಂಡಳಿ ಇದರ ಸುಧಾರಣೆಯಲ್ಲಿ ತೊಡಗಬಾರದೇಕೆ?

ತಂಬಾಕು ರೈತರಿಗೆ 'ತಂಬಾಕು ಬೆಳೆಗಾರರ ಸಂಘ'ದ ಅವಶ್ಯಕತೆ ಇದೆಯೆ?

ತಾಲ್ಲೂಕಿನ ಎಂ ಎಲ್ ಎ, ಎಂ ಪಿ ಗಳಿಗೆ ಈ ಅಕ್ರಮ ಗೊತ್ತೇ ಇಲ್ಲವೆ?

ಸಂತೆಯಂತ ಮಾರುಕಟ್ಟೆಯಲ್ಲಿ ಸಾರಾಸಗಟಾಗಿ ಲಂಚ ಕೊಡುವ ರೈತನ ಅಸಹಾಯಕತೆಗೆ ಕಾರಣ ಯಾರು? 


- ಈ ಎಲ್ಲಾ ಪ್ರಶ್ನೆಗಳು ಮಾರುಕಟ್ಟೆಗೆ ಹೊಸದಾಗಿ ಭೇಟಿಕೊಟ್ಟ ನನ್ನಂತಹವನಿಗೆ ಉದ್ಭವಿಸದೇ ಇರಲಾರವು. ಭ್ರಷ್ಟಾಚಾರ ಮುಕ್ತ ವ್ಯವಹಾರಕ್ಕೆ ಖರ್ಚಾಗುವುದೇನು? ಈ ಕೃತ್ಯವನ್ನು ಬಲ್ಲ ತಂಬಾಕು ಮಂಡಳಿ ಮೌನವಾಗಿರುವುದೇಕೆ? 


ತಂಬಾಕು ಬೆಳೆವ ರೈತರು ಸಾಧ್ಯವಾದಷ್ಟು ಶೇರ್ ಮಾಡಿ. ಅಥವಾ ಆಡಳಿತಗಾರರ ಸಂಪರ್ಕದಲ್ಲಿರುವವರು ಹಂಚಿಕೊಳ್ಳಿ. ಇದು ನನ್ನೊಬ್ಬನ ನೋವಲ್ಲ, ಕೂಗಲ್ಲ, ಸಂಕಟವಲ್ಲ. ಸ್ವಾಭಿಮಾನ ಬದುಕಿನ ಕನಸು ಕಾಣುವ ಪ್ರತಿಯೊಬ್ಬ ರೈತನ ಧನಿ. ಭ್ರಷ್ಟಾಚಾರ ಮುಕ್ತ ಸಮಾಜದ ಆಶಯ ಹೊಂದಿರುವ ಎಲ್ಲರ ಅಭಿಪ್ರಾಯ. ಇನ್ನಾದರೂ ತಂಬಾಕು ಬೆಳೆಗಾರರಾದರೂ ಜವಾಬ್ದಾರರಾಗಬೇಕಿದೆ. ಬಡವನ ಕಷ್ಟ ದವಡೆಗೆ ಮೂಲ ಅನ್ನುವ ಕಾಲದಲ್ಲಿ ನಾವಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಬದುಕಿನ ಅವಕಾಶ, ಕಾನೂನು ಕಲ್ಪಿಸಿದೆ‌. ಅಕ್ರಮಗಳು ಎಲ್ಲೆ ನಡೆದರೂ ಯಾರು ಬೇಕಾದರೂ ಪ್ರಶ್ನಿಸಬಹುದು. ಲಂಚ ಪಡೆವುದು ಮಾತ್ರ ಅಪರಾಧವಲ್ಲ, ಕೊಡುವುದೂ ಕೂಡ ಅಪರಾಧ. ಒಗ್ಗಟ್ಟಿನಲ್ಲಿ ಬಲದ ನಂಬಿಕೆ ಇರುವವರು ಶೇರ್ ಮಾಡಿ. ಕೆಲವೇ ಕೆಲವು ಭ್ರಷ್ಟ ಮನಸ್ಸುಗಳನ್ನು ಬದಲಾಯಿಸಲು ರೈತನ ಒಗ್ಗಟ್ಟು ಸಾಕು. 


ಧನ್ಯವಾದಗಳು,


- ಚಂದ್ರು ಎಂ ಹುಣಸೂರು

MAMCJ in Mysore open university, former journalists in Kannada news papers..


Friday 24 April 2020


ಈಗಷ್ಟೇ ಹಾಲು ಜೇನು ಸಿನಿಮಾ ನೋಡಿ ಹನಿಗಣ್ಣಾಗಿ ಆಚೆ ಬಂದೆ. ಈ ಮುಂಚೆ ತುಂಬಾ ವರ್ಷಗಳ ಹಿಂದೆ ಆ ಸಿನಿಮಾ ನೋಡಿದ್ದರೂ ಈವತ್ತು ಹೊಸದಾಗಿ ನೋಡುತ್ತಿರುವ ಅನುಭವವಿತ್ತು. ಕೊನೆಯಲ್ಲಿ ಅವಳ ಅಗಲಿಕೆಯ ದುಃಖದ
ಉತ್ತುಂಗದ ಪರಾಕಾಷ್ಠೆ ತಲುಪಿದ ಅಭಿನಯ ನೋಡಬಾರದಿತ್ತು ಅನ್ನುವಷ್ಟು ನೋವಾಗುತ್ತದೆ. ಅಷ್ಟೊಂದು ಚೆನ್ನಾಗಿ ಯಾಕಾದರೂ ಅಭಿನಯಿಸುತ್ತಾರೊ ಅನಿಸುತ್ತದೆ.

ಇದೆ ಮೊದಲಲ್ಲ. ಕಾಮನಬಿಲ್ಲಿನಲ್ಲಿ ಅವರು ಕಾಮನಬಿಲ್ಲಾಗಿಯೇ ಉಳಿಯುವ ಅಪೂರ್ವ ಕಾಲಘಟ್ಟದಲ್ಲಿ ನಾವು ಅವರ ಒಳ್ಳೆಯತನಕ್ಕೆ ನೊಂದುಕೊಂಡೆವು.
ಕಸ್ತೂರಿ ನಿವಾಸದ ಕೊನೆ ಸೀನಿನಲ್ಲಿ ನಡೆದು ಹೋಗುತ್ತಾರಲ್ಲ ಆಗ ಅವರು ಸ್ವಲ್ಪ ಧೈರ್ಯ ತಂದುಕೊಳ್ಳಲಿ, ಅವರಿಗೆ ಯಾರಾದರೂ ಸಮಾಧಾನ ಮಾಡಿಬಿಡಲಿ, ಅವರ ಸ್ಥಿತಿ ನೋಡಲಾಗದೆ ಕಂಗಾಲಾದೆವು.

ಬಂಗಾರದ ಮನುಷ್ಯ 'ಆಗದು ಎಂದು ಕೈಕಟ್ಟಿ ಕುಳಿತರೆ' ಅಂದಾಗ ಕುಳಿತಿರುವ ನಾವು ಎದ್ದು ಹೊರಹೋಗಿ ಈಗಲೇ ಉಳಿದ ದುಡಿಮೆಯಲ್ಲಿ ತೊಡಗೋಣ ಅಂದುಕೊಂಡಿದ್ದೆವು. ರಾಜೀವ, ರಾಜೀವಪ್ಪ ಅನ್ನೋದು ಎಷ್ಟೊಂದು ಒಳ್ಳೆಯ ಹೆಸರು. ಯಾರನ್ನಾದರೂ ಹಾಗೆ ಕರೆಯೋಣ ಅಂದರೆ ನಮ್ಮ ಸುತ್ತಮುತ್ತ ಇಲ್ಲಾರಿಗೂ ಆ ಹೆಸರಿಲ್ಲ. ಯಾರಿಗಾದರೂ ನಾವೆ ಹೆಸರಿಡೋಣ ಅಂದರೆ ಅವರೆಲ್ಲ ಜಾತಕ, ಜ್ಯೋತಿಷ್ಯದ ಮುಖೇನ ಪದಗಳನ್ನು ಆಯ್ಕೆ ಮಾಡಿಕೊಂಡರು. ರಾಜೀವನಿಗೆ ಯಾವ ಜಾತಕದ ಬಲವಿತ್ತು. ಹಿಡಿದ ಛಲ ಸಾಧಿಸುವ ದುಡಿಮೆಯ ಬಲವಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ತನವಿತ್ತು. ಅವರ ತೋಟದ ದ್ರಾಕ್ಷಿ ನನಗೀಗಲೂ ಬಲುರುಚಿ.

ಗಂಗಾ ಯಮುನಾ ಸಂಗಮ, ಚೆಲುವೆಯೇ ನಿನ್ನ ನೋಡಲು, ನಾದಮಯ, ಓ ಪ್ರಿಯತಮೆ, ಓ ಗುಲಾಬಿಯೇ, ಹೀಗೆ ಯೋಚಿಸುತ್ತಿದ್ದರೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ.

ಎಂದಿಗಿಂತ ಈಗ ಸೋಷಿಯಲ್ ಮೀಡಿಯಾಗಳ ಕೃಪೆಯಿಂದ ರಾಜಕುಮಾರರ ಅಭಿನಯ, ಹಾಡುಗಳನ್ನು ಹೊರತುಪಡಿಸಿ ಅವರು ಬದುಕಿದ ರೀತಿ ನಮ್ಮನ್ನು ತಂಗಾಳಿಯಂತೆ ತಲುಪುತ್ತಿದೆ. ಜಯಂತ ಕಾಯ್ಕಿಣಿ, ನಿಸಾರ್ ಅಹಮದ್ ಅವರಂತಹ ಮೇರು ಸಹೃದಯಿಗಳ ಬಾಯಲ್ಲಿ ರಾಜಕುಮಾರರ ವರ್ಣನೆ ಕೇಳುವ ಭಾಗ್ಯ ನಮಗಿಂದು ಯಥೇಚ್ಛವಾಗಿ ಲಭಿಸಿದೆ. ದಿನದಿಂದ ದಿನಕ್ಕೆ ವ್ಯಕ್ತಿತ್ವ ಅಜರಾಮರವಾಗಿ  ಅರಳುತ್ತಲೇ ಇದೆ. ಇಷ್ಟ ದೇವರನ್ನು ಕುರಿತು ಪ್ರಾರ್ಥಿಸುವುದ ಬಿಟ್ಟು ಸ್ವಾರ್ಥದಲ್ಲಿ ಅದ್ದಿಹೋಗಿರುವ ನಾವು ಇನ್ನೇನು ಮಾಡಲು ಸಾಧ್ಯ. ಅದೇ ಧನಿ ನಮ್ಮೊಡನಿರುತ್ತದೆ, ಅದೇ ಸ್ವಚ್ಛ ಕನ್ನಡ ನಮ್ಮನ್ನು ಜಾಗೃತರನ್ನಾಗಿಸುತ್ತದೆ. ಕೇಳಿದ್ದನ್ನು ಅನಿಸಿದ್ದನ್ನು ಹಂಚಿಕೊಂಡು ತೃಪ್ತರಾಗೋಣ. ಹಿಡಿತಕ್ಕೆ ಸಿಗದ ಕಾಮನಬಿಲ್ಲನ್ನು ಸದಾ ಹಿಡಿಯುವ ಪ್ರಯತ್ನ ಮಾಡೋಣ.....💓

- ಚಂದ್ರು ಎಂ ಹುಣಸೂರು
   24-04-2020

Friday 10 April 2020

ಗುರುಗಳನ್ನು ನೆನೆಯುತ್ತಾ...



ಗುರುಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಕೆಲವೇ ವ್ಯಕ್ತಿಗಳ ಹುಟ್ಟು ಹಬ್ಬಗಳು ಹಾಗೂ ಇಷ್ಟದ ಹಬ್ಬಗಳು ಮರುಕಳಿಸಿದಾಗಷ್ಟೇ ನಮಗೆ 'ಅಯ್ಯೊ, ಆಗಲೇ ಬಂದುಬಿಡ್ತಾ, ಎಷ್ಟು ಫಾಸ್ಟಾಗಿ ಹೋಗ್ತಿದ್ಯಪ್ಪ ವರ್ಷಗಳು' ಅನ್ನಿಸೋದು. ಅದು ಶಿಲ್ಪ ಮೇಡಂ ವಿಚಾರದಲ್ಲಿ ನನಗೆ ಅನಿಸಿದೆ.

7-8 ವರ್ಷಗಳ ಹಿಂದೆ ಡಿಗ್ರಿಯಲ್ಲಿರುವಾಗ ಕೀಪ್ಯಾಡ್ ಮೊಬೈಲಿನಿಂದ ಮೆಸೆಜ್ ಮೂಲಕ 'ಭಯಭಕ್ತಿ'ಗಳಿಂದ ಮೇಡಂ ಗೆ ನನ್ನ ಮೊದಲ ವಿಷ್ ಕಳಿಸಿದ್ದೆ. ಆಗ ನಾನು ಬಿ ಎ(ಹೆಚ್ ಎಸ್ ಕೆ) ವಿದ್ಯಾರ್ಥಿ, ಮೇಡಂ ಕನ್ನಡ ಬೋಧಿಸುತ್ತಿದ್ದರು. ಕವನಗಳ ಗೀಳು ಆಗಷ್ಟೇ ನನ್ನನ್ನು ಸೆಳೆಯುತ್ತಿತ್ತು.‌ ವಿಚಿತ್ರ ಅಂದರೆ ಸಿನಿಮಾ ಹಾಡುಗಳೆ ನಮ್ಮ ಕವನಗಳ ಸಾಲಿನ ಮೂಲ ಬೇರು. ಹಕ್ಕಿ ಸಿಕ್ಕ ಸಿಕ್ಕ ಕಡೆ ಕಾಳು-ಕಡ್ಡಿ, ಹುಳ-ಉಪ್ಪಟೆ ಆಯ್ದು ತಿನ್ನುವಂತೆ ಯಾವುದೋ ಪುಸ್ತಕ ಓದುವುದು, ಯಾವುದೋ ಪೇಪರಿನ ಯಾವುದೋ ಕಾಲಂ ಓದುವುದು, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಗುಂಪಾಗಿ ಕುಳಿತು ಕನ್ನಡ ಗದ್ಯಗಳನ್ನು ನಮಗೆ ಅರ್ಥವಾದಂತೆ ಅರ್ಥೈಸಿಕೊಳ್ಳುವುದು ನಮ್ಮ ಆವತ್ತಿನ ಓದಾಗಿತ್ತು. ಬರೆಯುವುದು ಯಾರಿಗೆ ಯಾಕೆ ಮತ್ತು ಹೇಗೆ ಎಂಬ ತಿಳುವಳಿಕೆಯಿಲ್ಲದ ಕಾಲಘಟ್ಟ. ಆಗ ಸಿಕ್ಕರು ನೋಡಿ ನಮ್ಮ ಶಿಲ್ಪ ಶ್ರೀ ಮೇಡಂ.

ತುಂಬಾ ಮೆಲುಧ್ವನಿಯಲ್ಲಿ ಪಾಠ ಮಾಡುತ್ತಿದ್ದರು. ಹೇಳಬೇಕಾದದ್ದನ್ನು ನೀಟಾಗಿ ಹೇಳುತ್ತಿದ್ದರು. ಆರ್ಭಟವಿರಲಿಲ್ಲ, ಆಲಾಪನೆಯಿರುತ್ತಿತ್ತು. ಡಿಗ್ರಿಯಲ್ಲಿ ಗಂಟೆಗೊಬ್ಬ ಅಧ್ಯಾಪಕರು ಬರುತ್ತಿದ್ದರು. ಒಬ್ಬರ ಕ್ಲಾಸ್ ಮುಗಿಯುತ್ತಿದ್ದಂತೆ ಮತ್ತೊಬ್ಬ ಅಧ್ಯಾಪಕ ಬರುವ ತನಕ ಹೊರಗೆ ಅಲೆಯಬಹುದಾಗಿತ್ತು. ಅದು ಒಂತರ ಚೆನ್ನಾಗಿತ್ತು. ಗಂಟೆಗಿಂತ ಹೆಚ್ಚು ಹೊತ್ತು ಕೂತಲ್ಲೆ ಕೂತು ಪಿಯುಸಿವರೆಗೆ ಬೇಸತ್ತಿದ್ದ ಎಲ್ಲರಿಗು ಇದೊಂತರ ಹೊಸದಾಗಿತ್ತು ಮತ್ತು ಮಜವಾಗಿತ್ತು. ಶಿಲ್ಪ ಮೇಡಂ ಸ್ಟಾಫ್ ರೂಮಿನಿಂದ ಹೊರ ಬರುತ್ತಿರುವಾಗಲೆ ನಮಗೆ ಗೊತ್ತಾಗುತ್ತಿತ್ತು ಈಗ ಇವರ ಕ್ಲಾಸ್ ನಮಗೆ ಅಂತ. ನಾವೆಲ್ಲ ಕಾರಿಡಾರಿನಲ್ಲೊ ಅಂಗಳದಲ್ಲೊ ನಿಂತಿದ್ದವರು ಗುರುಗಳನ್ನು ಹಿಂಬಾಲಿಸುತ್ತಿದ್ದೆವು. ಅವರ ವ್ಯಕ್ತಿತ್ವ, ಉಡುಗೆ ತೊಡುಗೆ, ನಮ್ಮೊಡನೆ ಅವರ ಮಾತು ಇವೆಲ್ಲ ಉಳಿದ ಅಧ್ಯಾಪಕರಿಗಿನ್ನ ವಿಭಿನ್ನವಾಗಿತ್ತು. ಅಂದರೆ ಸರಳವಾಗಿತ್ತು ಅನ್ನಬಹುದು.

100-150 ವಿದ್ಯಾರ್ಥಿಗಳಿಂದ ತರಗತಿ ತುಂಬಿರುತ್ತಿತ್ತು. ಹೆಚ್ ಪಿ ಕೆ & ಹೆಚ್ ಎಸ್ ಕೆ ವಿದ್ಯಾರ್ಥಿಗಳು ಕನ್ನಡದಲ್ಲಿ ಕಂಬೈನ್ಡ್ ಆಗುತ್ತಿದ್ದುದರಿಂದ ಮಿನಿ ಜಾತ್ರೆ ಅನ್ನಿ. ಮೇಡಂ ಬಂದ ಒಂದೆರೆಡು ನಿಮಿಷ ಗಿಜಿಗಿಜಿ ಶಬ್ಧ ನಮ್ಮದು. ಆಮೇಲೆ ನೀರವ ಮೌನ. ಅದೆಷ್ಟು ಚನ್ನಾಗಿ ಪಾಠ ಮಾಡುತ್ತಿದ್ದರು, ಈವತ್ತಿಗೆಲ್ಲ ಆ ನೆನಪು ಇಷ್ಟೊಂದು ಸೊಗಸಾಗಿರುತ್ತದೆ ಎಂಬ ಯಾವ ಕಲ್ಪನೆಯೂ ಇರಲಿಲ್ಲ. ಹಾಗೇನಾದರೂ ಇದ್ದಿದ್ದರೆ ಬಹುಶಃ ಇನ್ನೂ ಹೆಚ್ಚು ಹೆಚ್ಚಾಗಿ ಕಾಲೇಜು ಜೀವನದಲ್ಲಿ  ಮುಳುಗುತ್ತಿದ್ದೆವೊ ಏನೊ. ಗುರುಗಳನ್ನು ವಿನಾಕಾರಣ ಹೆಚ್ಚು ಹೆಚ್ಚು ಪ್ರಶ್ನಿಸುವ ಅಧಿಕ ಪ್ರಸಂಗದಂತಾ ನೆನಪು ಕೂಡ ಈವತ್ತಿಗೆ ಶ್ರೇಷ್ಠವಾಗಿಬಿಡುತ್ತಿತ್ತು.

ಮೇಡಂ ಸೀಮಿತ ಸ್ವರದಲ್ಲಿ ಪಾಠ ಮಾಡುವುದರಿಂದ ತರಗತಿ ತನ್ಮಯತೆಯಿಂದಿರುತ್ತಿತ್ತು. ಇಂಟರ್ನ್‌ಶಿಪ್‌ನಲ್ಲಿರುವರೇನೊ ಅನ್ನುವಷ್ಟು ಕಾಳಜಿಯಿಂದ ಆಸ್ಥೆಯಿಂದ ಸಂವಹಿಸುತ್ತಿದ್ದದ್ದು ಮತ್ತು ಅವರ 'ಕಾವ್ಯ ಕಾಳಜಿ'ಯಿಂದ ವಿಶೇಷ ಅನಿಸುತ್ತಿದ್ದರು.

ನನ್ನ ಕವನಗಳನ್ನು 'ಸಾವಧಾನ'ದಿಂದ ತಿದ್ದುತ್ತಿದ್ದರು. ಈಗ ಆ ಕವನಗಳನ್ನು ನೋಡಿದರೆ ನಮ್ಮ ಆಧಾರ್ ಫೋಟೊ ನೋಡಿದಂತೆಯೇ ಅನಿಸುತ್ತದೆ. ಆದರೆ ಒಂದು ಮಾತನ್ನಾದರೂ ತಾತ್ಸಾರದಿಂದ ಮೇಡಂ ನುಡಿದಿದ್ದರೆ ಆಗ ನನ್ನಲ್ಲಿ ಆಗುತ್ತಿದ್ದ ಗಾಯ ಅಪಾರ. ಕೆಲಸಕ್ಕೆ ಬಾರದ ಮುಜುಗರದ ವ್ಯಕ್ತಿತ್ವದವ ನಾನು. ಹೀಗಿರುವಾಗ ತಡವರಿಸಿದ ಹೆಜ್ಜೆಗಳಿಗು ಬಹುದೂರ ಕ್ರಮಿಸುವ ವಿಶ್ವಾಸ ಕೊಟ್ಟರು. ಅದನ್ನೆಲ್ಲ‌ ಮರೆವುದುಂಟೆ..

ನೋಡಿ, ಅನುಬಂಧ ಅನ್ನೋದು  ಜೀವನದಲ್ಲಿ ಬಹಳ ಮುಖ್ಯ. ಈವತ್ತಿಗೂ ಅದೇ ಕಾಳಜಿ, ಅದೇ ಪ್ರೀತಿ, ಅದೇ ಮಮತೆ. ಗುರುಗಳ ಹೃದಯ ದೊಡ್ಡದು. ಈಗ ನನ್ನ 'ಎಂಟಾಣೆ ಪೆಪ್ಪರುಮೆಂಟು' ಕವನ ಸಂಕಲನಕ್ಕೂ ಬೆನ್ನುಡಿ ಬರೆದಿದ್ದಾರೆ.‌ ಅವರ ಬಗ್ಗೆ ಹೆಚ್ಚು ಹೆಚ್ಚು ಹೇಳಬೇಕೆನಿಸುತ್ತದೆ. ಇನ್ನೂ ಸಾಕಷ್ಟು ಕಾಲಾವಕಾಶವಿದೆ, ‌ಹಂಚಿಕೊಳ್ಳೋಣ..

(ಗುರುಗಳು ಮತ್ತು ನನ್ನ ಸಂಭಾಷಣೆಯ ಸಣ್ಣ ತುಣುಕು)👇

ನಾನು:- ಮೇಡಂ ಪದ್ಯ
ಮೇಡಂ:- "ಇವಾಗ ಕ್ಲಾಸ್ ಇದೆ, ನಾನ್ ಆಮೇಲ್ ನೋಡಿ ಇಟ್ಟಿರ್ತೀನಿ. ಆದ್ರೆ ಮಧ್ಯಾಹ್ನ ಬಾ"😍😍

Wednesday 8 August 2018

ಹೆಣ್ಣು

*ಹೆಣ್ಣು*

ಏನೇನೋ ಆಗಬೇಕಿದ್ದ
ಅತಿರೇಖ ಕನಸುಗಳನ್ನು ಕಂಡ
ಅಂತಹ ಸಾಮರ್ಥ್ಯವನ್ನು ಹೊಂದಿದ್ದ
ಹೆಣ್ಣು ಮಕ್ಕಳು
ರೇಷ್ಟೆ ಸೀರೆಯುಟ್ಟು
ತಾಳಿ ಬಿಗಿಸಿಕೊಂಡದ್ದೆ ತಡ
ಹಡೆದರು ಹಸುಗೂಸುಗಳನ್ನು
ಆಶ್ಚರ್ಯವಾಗುವಂತೆ
ಅವರು ಮಕ್ಕಳನ್ನು ಮಾತ್ರ ಹೆರಲು ಹುಟ್ಟಿರುವಂತೆ..

ಕರಕುಶಲ ಕಲೆ
ನೃತ್ಯ, ಅಭಿನಯ, ಭಾಷಣದಂತಹ ಅಭಿವ್ಯಕ್ತ ಸಂಗತಿಗಳಲ್ಲಿ ನಿಪುಣರಾಗಿದ್ದ ಅವರು
ಹೊಟ್ಟೆ ಮುಂದೆ ಮಾಡಿಕೊಂಡು, ಮುದ್ದಾದ ಹಸುಗೂಸಿನೊಂದಿಗೆ ಎದುರಾಗಿಬಿಟ್ಟರೆ
ಹಾರಿ ಹೋಗಲಿದೆ ನಮ್ಮ ಪ್ರಾಣ..

ಬರವಣಿಗೆಯೆಲ್ಲ ಬಹುದೂರ ಸಾಗಿ
ಕನಸುಗಳೆಲ್ಲ ಕಣ್ಮುಚ್ಚಿಕೊಂಡು
ಗುರಿಗಳೆಲ್ಲ ಗೋರಿ ಕಟ್ಟಿಸಿಕೊಂಡು
ಸಾಂಬರಿಗೆ ಸರಿಯಾಗಿ ಉಪ್ಪು ಹಾಕಿ
ಬಿಸಿನೀರು ಕಾಯಿಸುತ್ತಾ
ಒಬ್ಬಳೇ ಬಸ್ಸಿನಲ್ಲಿ ಓಡಾಡುವಂತಾಗಿಬಿಟ್ಟರೆ!!

ಆ ಚಿಗುರನ್ನು ಚಿವುಟಿದವರ್ಯಾರು?
ಆ ಕನಸನ್ನು ಕಸಿದುಕೊಂಡವರ್ಯಾರು?
ಆ ಬೆಳಕನ್ನು ಬಸಿದುಕೊಂಡವರ್ಯಾರು?
ಬದುಕೆಂದರೆ ಇನ್ನೂ ಬದುಕಿದೆ ಅಂದುಕೊಳ್ಳೋದ?
ಬದುಕುವವರೆಗೆ ಬದುಕಿದರಾಯ್ತು ಅಂದುಕೊಳ್ಳೋದ?

ನಾಲ್ಕು ಗೋಡೆಯ ಮಧ್ಯೆ
ಮೌನಿಯಾಗುವಳೆ ಹುಡುಗಿ
ಬಯಕೆಗಳೆಲ್ಲ ಸೊರಗಿ
ಸೆರಗಿನಲ್ಲಂಟಿರಬಹುದೆ ಹುದುಗಿ..

- ಚಂದ್ರು ಎಂ ಹುಣಸೂರು